ಹೌದು, ಶಾಲೆಯ ಮುಖವೇ ನೋಡದ ವ್ಯಕ್ತಿಯೊರ್ವ ತನ್ನ ಬದುಕಿನಲ್ಲಿ ಅನುಭವಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಣದ ಮಹತ್ವ ಅರಿತು, ತಾನು ಕಲಿಯದಿದ್ದರೂ ತನ್ನ ಮಕ್ಕಳು ಊರ ಮಕ್ಕಳು ಉತ್ತಮ ಶಿಕ್ಷಣ ಪಡೆಯಲಿ ಎಂಬ ವಿಚಾರದಿಂದ ತನ್ನ ಊರ ಮಕ್ಕಳಿಗಾಗಿ ಶಾಲೆ ಸ್ಥಾಪಿಸಿ ದೇಶದ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿ ಇಂದು ದೇಶದ ಪ್ರತಿಷ್ಠಿತ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದು ಮೆಚ್ಚುವಂತಹುದೇ.
ತಾನು ಸಂಪಾದಿಸುವ ಅಲ್ಪ ಪ್ರಮಾಣದ ಹಣದಲ್ಲಿಯೇ ಗ್ರಾಮದ ಮಕ್ಕಳ ಅಭಿವೃದ್ದಿಗೆ ಶ್ರಮಿಸುತ್ತಿರುವ ಇವರು ನಮ್ಮ ನಾಡಿನ ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಗ್ರಾಮದ ಹಾಜಬ್ಬ. ಪ್ರಸ್ತುತ ಗಣರಾಜ್ಯೋತ್ಸವದಂದು ಕೇಂದ್ರ ಸರ್ಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿ ನಾಡಿನ ಹೆಸರಿನೊಂದಿಗೆ ಗ್ರಾಮದ ಹೆಸರು ಕೂಡ ಅಜರಾಮರವಾಗುವಂತೆ ಮಾಡಿದ ಅಕ್ಷರದ ಸಂತ ನಮ್ಮ ಹಾಜಬ್ಬ.
ಗ್ರಾಮದ ಹೆಸರು ಬದಲು :
ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಇಂದು ಹಾಜಬ್ಬರ ಹರೇಕಳ ಎನ್ನುವ ಮಟ್ಟಿಗೆ ಗುರುತಿಸುವಂತಾಗಿದೆ. ಸರಳ ಸಜ್ಜನಿಕೆಗೆ ಪ್ರಖ್ಯಾತರಾದ ಹಾಜಬ್ಬ ಇಂದು ವಿದ್ಯಾವಂತರಾಗದೆ ಹೋದರೂ ಕೂಡ ದೇಶದ ಸಮಸ್ತ ನಿವಾಸಿಗಳಿಗೆ ಮಾದರಿಯಾಗಿದ್ದಾರೆ.
ಹರೇಕಳ ಗ್ರಾಮದಲ್ಲಿ 1 ರಿಂದ 10 ನೇ ತರಗತಿವರೆಗೂ ಶಾಲೆ ನಿರ್ಮಾಣ ಮಾಡಿರುವ ಇವರು, ಮಕ್ಕಳಿಗೆ ಉನ್ನತ ಶಿಕ್ಷಣ ದೊರೆಯಲಿ ಎಂಬ ಮಹದಾಸೆಯೊಂದಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಪದವಿ ಪೂರ್ವ ಕಾಲೇಜು, ಡಿಗ್ರಿ ಕಾಲೇಜು, ಐಟಿಐ ಕಾಲೇಜು ಪ್ರಾರಂಭದ ಉದ್ದೇಶ ಇಟ್ಟುಕೊಂಡಿದ್ದಾರೆ.
ಸರಳ ಹೃದಯದ ವಿರಳ ವ್ಯಕ್ತಿತ್ವ :
ಹರೇಕಳ ಹಾಜಬ್ಬ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾದಾಗ ಅವರು ಅಷ್ಟೊಂದು ಅಚ್ಛರಿ ಪಡದಿರುವುದಾಗಲಿ ಅಥವಾ ತಬ್ಬಿಬ್ಬು ಆಗಿರುವುದಾಗಲಿ ನಡೆಯಲಿಲ್ಲ.
ಸಹಜವಾಗಿಯೇ ಅದೆನೋ ದೊಡ್ಡ ಪ್ರಶಸ್ತಿ ಬಂದಿದೆ ಎಂಬ ಚಿಕ್ಕ ಯೋಚನೆಯಿಂದ ತನ್ನ ಕೆಲಸದಲ್ಲಿ ತೊಡಗಿದ್ದು ಇವರಲ್ಲಿಯ ವಿಶೇಷತೆ ಎತ್ತಿ ತೋರಿಸುತ್ತದೆ. ಒಳ್ಳೆತನದಿಂದಲೇ ಗ್ರಾಮದಲ್ಲಿ ಸಹಜವಾಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ಹಾಜಬ್ಬ ಅವರು ಶಾಲೆ ಹೆಸರಲ್ಲಿ ಅದೆಷ್ಟು ಹಣ ಕೊಳ್ಳೆ ಹೊಡೆಯುತ್ತಿರುವರೋ ಎಂಬ ಆರೋಪಗಳಿಗೂ ಕೂಡ ಕಿವಿಗೊಡದೆ ಮುನ್ನಡೆದರು.
ಹರಕು ತೊಗಲಿನ ಮಿಣಿಯು
ಕೊಟ್ಟು ಪೇಳುವ ದಾತ
ಅವ ಹೀನ ಜಾತ
16ನೇ ಶತಮಾನದ ವೈಚಾರಿಕ ಸಂತ ಕನಕದಾಸರ ವಾಣಿಯಂತೆ ಹರೇಕಳ ಹಾಜಬ್ಬ ಯಾರಿಂದ ಏನು ಅಪೇಕ್ಷೆ ಪಡದೆ ತಾನು ಕೆಲಸ ಮಾಡುತ್ತಾರೆ. ನಿಮ್ಮ ಬಗ್ಗೆ ಸ್ಥಳಿಯರಿಗೆ ಅಭಿಮಾನ, ಗೌರವ ಇಲ್ಲವೇ ಎಂಬ ಕೆಲ ಪತ್ರಕರ್ತರ ಪ್ರಶ್ನೆಗಳಿಗೆ ಮುಗುಳ್ನಕ್ಕೂ ಮುನ್ನಡೆಯುತ್ತಾರೆ. ನಮಗ್ಯಾಕೇ ಗೌರವ ನಾನು ನನ್ನ ಕೆಲಸ ಮಾಡುತ್ತಿರುವೆ. ಶಾಲೆಯಲ್ಲಿಯ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ಏಕೈಕ ಉದ್ಧೇಶವಿದೆಯೇ ಹೊರತು ಅಪೇಕ್ಷೆ ಇಲ್ಲ ಎಂಬ ಮಾತು ಹೇಳುತ್ತಾರೆ ಹರೇಕಳ ಹಾಜಬ್ಬ.
- ಬಿ.ಎಂ ಅಮರವಾಡಿ, ಬೀದರ್.
Nice geleya
ReplyDeleteSuper Balaji sir
ReplyDeleteI heard once about hajabba sir ... actually we have to feel shame as a educated. Good job sir we have to lighten these kind of personality.Hats off hajabba sir....
ReplyDelete